ಸೆ.27ರಂದು ಭಾರತ್ ಬಂದ್: ಬೃಹತ್ ರೈತ ಹೋರಾಟಕ್ಕೆ ಕೋಡಿಹಳ್ಳಿ ಚಂದ್ರಶೇಖರ್ ಕರೆ

 ಸೆ.27ರಂದು ಭಾರತ್ ಬಂದ್: ಬೃಹತ್ ರೈತ ಹೋರಾಟಕ್ಕೆ ಕೋಡಿಹಳ್ಳಿ ಚಂದ್ರಶೇಖರ್ ಕರೆ

ಬೆಂಗಳೂರು : ಕೇಂದ್ರದ ಕೃಷಿ ಕಾಯ್ದೆ ವಿರೋಧಿಸಿ ರೈತ ಸಂಘಟನೆಗಳು ಸೆ.27ರಂದು ಭಾರತ್ ಬಂದ್ ಗೆ ಕರೆ ನೀಡಿದ್ದು, ಬೃಹತ್ ಮಟ್ಟದಲ್ಲಿ ಹೋರಾಟ ನಡೆಸಲು ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್ ಕರೆ ನೀಡಿದ್ದಾರೆ. ಬೆಂಗಳೂರಿನಲ್ಲಿ ರೈತ ಮುಖಂಡರ ಸಭೆ ಬಳಿಕ ಮಾತನಾಡಿದ ಅವರು, ರೈತ ಸಂಘಟನೆಗಳು ಕರೆ ನೀಡಿರುವ ಭಾರತ್ ಬಂದ್ ಗೆ ಸಂಯುಕ್ತ ಕಿಸಾನ್ ಮೋರ್ಚಾ, ಕಬ್ಬು ಬೆಳೆಗಾರರ ಸಂಘ, ರೈತ ಸಂಘ, ಹಸಿರು ಸೇನೆ ಸೇರಿದಂತೆ ಎಲ್ಲಾ ರೈತ ಸಂಘಟನೆಗಳು ಬೆಂಬಲ ನೀಡಿವೆ. ಬೇರೆ ಸಂಘಟನೆಗಳು ಕೂಡ ಬೆಂಬಲ ಘೋಷಣೆ ಬಿಟ್ಟು ನೈತಿಕವಾಗಿ ಹೋರಾಟಕ್ಕೆ ಬೆಂಬಲ ನೀಡಬೇಕು ಎಂದು ಕರೆ ನೀಡಿದರು.

ರೈತರೇ ಈ ಹೋರಾಟದ ಮುಂಚೂಣಿ ವಹಿಸಲಿದ್ದಾರೆ. ಈ ಬಾರಿ ಸಂಪೂರ್ಣ ಬಂದ್ ಗೆ ನಿರ್ಧರಿಸಲಾಗಿದೆ. ರೈತರು ಕರೆ ನೀಡಿರುವ ಭಾರತ್ ಬಂದ್ ಗೆ ಅಪಸ್ವರ ಎತ್ತುವವರು ಕೇವಲ ಸರ್ಕಾರದ ಪರ ಇರುವವರು ಅಷ್ಟೇ. ನಾವು ರಾಜಕೀಯ ಪಕ್ಷಗಳ ಬೆಂಬಲ ಕೇಳುತ್ತಿಲ್ಲ. ಇದು ರೈತ, ಅನ್ನದಾತನ ಹೋರಾಟವಾಗಿದೆ. ಸಾರ್ವಜನಿಕರು ಬೆಂಬಲಿಸಬೇಕು ಎಂದು ಮನವಿ ಮಾಡಿದರು.

ಇದೇ ವೇಳೆ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಅವರು, ಮೋದಿ ಸರ್ಕಾರ ಎಲ್ಲವನ್ನೂ ಖಾಸಗೀಕರಣ ಮಾಡುತ್ತಿದೆ. ಬಂದರು, ರೈಲ್ವೆ, ಹೆದ್ದಾರಿ ಎಲ್ಲವನ್ನು ಖಾಸಗಿ ಕಂಪನಿಗಳಿಗೆ ಮಾರಾಟ ಮಾಡುತ್ತಿದೆ.  ಹೀಗೆಯೆ ಮುಂದುವರೆದರೆ ರೈತರನ್ನೂ ಖಾಸಗೀಕರಣ ಮಾಡುತ್ತಾರೆ. ಖಾಸಗೀಕರಣ ವಿರೋಧಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರದ ಮೂರು ಕೃಷಿ ಕಾಯ್ದೆ ವಿರೋಧಿಸಿ ಈ ಹೋರಾಟ ನಡೆಯಲಿದೆ. ಬಂದ್ ಯಶಸ್ವಿಗೊಳಿಸುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.