ಸುಳ್ಳುಗಳಿಂದಲೇ ಸರ್ವಾಧಿಕಾರಿ ಸರ್ಕಾರ ಸುಭದ್ರ; ಬುದ್ಧಿಜೀವಿಗಳು ಸರ್ಕಾರದ ಸುಳ್ಳುಗಳನ್ನು ಬಯಲು ಮಾಡಬೇಕು

ನವದೆಹಲಿ: ಸರ್ಕಾರದ ಸುಳ್ಳುಗಳ ಬಯಲು ಮಾಡುವ ಕರ್ತವ್ಯ ಸಾರ್ವಜನಿಕ ಬುದ್ಧಿಜೀವಿಗಳದ್ದಾಗಿದೆ ಎಂದು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಜಸ್ಟಿಸ್ ಡಿ ವೈ ಚಂದ್ರಚೂಡ್ ಹೇಳಿದ್ದಾರೆ. ದೇಶದ ಆರನೇ ಮುಖ್ಯ ನ್ಯಾಯಮೂರ್ತಿಗಳಾಗಿದ್ದ ಎಂ.ಸಿ ಚಗ್ಲಾ ನೆನಪಿನಾರ್ಥವಾಗಿ ನಡೆದ ಸ್ಮಾರಕ ಕಾರ್ಯಕ್ರಮದಲ್ಲಿ ಮಾತನಾಡಿದ ನ್ಯಾಯಮೂರ್ತಿ, ಚಂದ್ರಚೂಡ್ ಅವರು, ‘ಪ್ರಜಾಪ್ರಭುತ್ವದಲ್ಲಿ ಸರ್ಕಾರಗಳನ್ನು ಹೊಣೆಯಾಗಿಸುವುದು ಅಗತ್ಯವಾಗಿದೆ ಹಾಗೂ ಸುಳ್ಳುಗಳು, ನಕಲಿ ಸುದ್ದಿಗಳ ವಿರುದ್ಧ ರಕ್ಷಣೆ ಪಡೆಯಬೇಕಿದೆ. ಸರ್ಕಾರದ ಸುಳ್ಳುಗಳನ್ನು ಬಯಲುಗೊಳಿಸುವ ಕರ್ತವ್ಯ ಸಾರ್ವಜನಿಕ ಬುದ್ಧಿಜೀವಿಗಳಿಗಿದೆ ಎಂದು ಹೇಳಿದ್ದಾರೆ.
ಸರ್ವಾಧಿಕಾರಿ ಸರ್ಕಾರಗಳು ತಮ್ಮ ಅಧಿಕಾರವನ್ನು ಇನ್ನಷ್ಟು ಸುಭದ್ರಗೊಳಿಸಲು ಸುಳ್ಳುಗಳ ಮೇಲೆ ಅವಂಬಿಸಿರುತ್ತವೆ. ಕೋವಿಡ್-19 ಅಂಕಿಅಂಶಗಳನ್ನು ಜಗತ್ತಿನ ದೇಶಗಳು ತಿರುಚುವುದನ್ನು ನಾವು ನೋಡುತ್ತಿದ್ದೇವೆ ಎಂದು ಹೇಳಿದರು. ಇದೇ ವೇಳೆ ಸತ್ಯಕ್ಕಾಗಿ ಸರಕಾರವನ್ನೇ ಅವಲಂಬಿಸುವ ಹಾಗಿಲ್ಲ. ನಿಷ್ಪಕ್ಷಪಾತ ಸುದ್ದಿ ನೀಡುವ ಮಾಧ್ಯಮಗಳು ನಮಗೆ ಬೇಕು ಎಂದು ಅಭಿಪ್ರಾಯ ಪಟ್ಟರು.
ಮಾಧ್ಯಮ ಕರ್ತವ್ಯದ ಕುರಿತು ಮಾತನಾಡಿದ ಅವರು, ‘ನಕಲಿ ಸುದ್ದಿಗಳ ಹಾವಳಿಯೂ ಹೆಚ್ಚಾಗಿದೆ. ಇದನ್ನು ಕೋವಿಡ್ ಸಾಂಕ್ರಾಮಿಕದ ಸಂದರ್ಭದಲ್ಲಿ ನೋಡಿದ್ದೇವೆ. ಸೆನ್ಸೇಶನ್ ಸೃಷ್ಟಿಸುವ ಸುದ್ದಿಗಳತ್ತ ಆಕರ್ಷಿತವಾಗುವುದು ಸಹಜ. ಆದರೆ ಇಂತಹ ಸುದ್ದಿಗಳು ಸಾಮಾನ್ಯವಾಗಿ ಸುಳ್ಳುಗಳನ್ನೇ ಆಧಾರವಾಗಿಸುತ್ತವೆ ಎಂದು ಹೇಳಿದರು.