ತಮಿಳುನಾಡು ಇನ್ನೂ 100 ವರ್ಷವಾದರೂ ಒಪ್ಪಿಗೆ ಕೊಡಲ್ಲ, ನಾವು ಡ್ಯಾಂ ಕಟ್ಟಬೇಕಷ್ಟೇ: ಡಿಕೆ ಶಿವಕುಮಾರ್

 ತಮಿಳುನಾಡು ಇನ್ನೂ 100 ವರ್ಷವಾದರೂ ಒಪ್ಪಿಗೆ ಕೊಡಲ್ಲ, ನಾವು ಡ್ಯಾಂ ಕಟ್ಟಬೇಕಷ್ಟೇ: ಡಿಕೆ ಶಿವಕುಮಾರ್

ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆಯಾಗಿರುವ ಮೇಕೆದಾಟು ಬಳಿ ಅಣೆಕಟ್ಟು ಕಟ್ಟುವ ಯೋಜನೆಗೆ ತಮಿಳುನಾಡು ಇನ್ನೂ 100 ವರ್ಷವಾದರೂ ಒಪ್ಪಿಗೆ ಕೊಡುವುದಿಲ್ಲ. ಆದುದರಿಂದ ತಮಿಳುನಾಡು ಒಪ್ಪಿಗೆಗಾಗಿ ಕಾಯುವ ಬದಲು ರಾಜ್ಯ ಸರ್ಕಾರ ಶೀಘ್ರವೇ ಯೋಜನೆಯನ್ನು ಆರಂಭಿಸಬೇಕು. ಅಲ್ಲದೆ ಯೋಜನೆಗೆ ಕೇಂದ್ರ ಸರ್ಕಾರದಿಂದ ಬೇಕಿರುವ ಅಗತ್ಯ ಒಪ್ಪಿಗೆಯನ್ನೂ ಪಡೆಯಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಗುರುವಾರ ನವದೆಹಲಿಯಲ್ಲಿ ಆಗ್ರಹ ಮಾಡಿದ್ದಾರೆ.

ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ನನಗೆ ಇರುವ ಮಾಹಿತಿಗಳ ಪ್ರಕಾರ ಮೇಕೆದಾಟು ಯೋಜನೆಗೆ ತಮಿಳುನಾಡಿನ ಅನುಮತಿ ಬೇಕಿಲ್ಲ. ನಾವು ನಮ್ಮ ನೆಲದಲ್ಲಿ, ನಮ್ಮ ಹಣದಿಂದ ಮಾಡುತ್ತಿರುವ ಯೋಜನೆ ಇದು. ದಿನೇ ದಿನೇ ಯೋಜನಾ ವೆಚ್ಚ ಹೆಚ್ಚಾಗುತ್ತೆ. ಆದುದರಿಂದ ಕೂಡಲೇ ಯೋಜನೆಯನ್ನು ಆರಂಭಿಸಬೇಕು.‌ ಇದಕ್ಕೆ ಕಾಂಗ್ರೆಸ್ ವತಿಯಿಂದ ಸಂಪೂರ್ಣ ಸಹಕಾರ ಇರಲಿದೆ.‌ ಕೇಂದ್ರ ಸರ್ಕಾರದಿಂದ ಕೆಲವೊಂದು ಒಪ್ಪಿಗೆ ಪಡೆಯಬೇಕಿದ್ದರೆ ಅದನ್ನು ಪಡೆಯಲಿ ಎಂದು ಹೇಳಿದರು.

ಕಾಂಗ್ರೆಸ್ ಶಾಸಕ ಜಮೀರ್ ಅಹಮದ್ ಖಾನ್ ಅವರ ಬೆಂಗಳೂರು ಮನೆಯ ಮೇಲೆ ಗುರುವಾರ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ಮಾಡಿದ ಬಗ್ಗೆ ಪ್ರತಿಕ್ರಿಯಿಸಿದ ಡಿ.ಕೆ. ಶಿವಕುಮಾರ್, ‘ಇದು ಒಂದು ರೀತಿಯ ಅರೆಸ್ ಮೆಂಟ್. ಜಮೀರ್ ಮನೆ ಮೇಲೆ ಐಟಿ ದಾಳಿ ಖಂಡನೀಯ.ಕಾನೂನು ಪ್ರಕಾರ ಈ ಪ್ರಕರಣ ಎದುರಿಸಲು ಅವರು ಸಿದ್ದರಿದ್ದಾರೆ. ಶ್ರೀನಿವಾಸಗೌಡ ಅವರು ವಿಧಾನಸೌಧದಲ್ಲಿ ಸಿ.ಪಿ. ಯೋಗೇಶ್ವರ್ ಮತ್ತು ಅಶ್ವಥನಾರಾಯಣ ಮೇಲೆ 30 ಕೋಟಿ ರೂಪಾಯಿಗಳ ಆರೋಪ ಮಾಡಿದ್ದರು. ರಮೇಶ್ ಜಾರಕಿಹೊಳಿ ಬಿಜೆಪಿ ಸರ್ಕಾರ ರಚನೆಗೆ 9 ಕೋಟಿ ಖರ್ಚು ಮಾಡಿರುವುದಾಗಿ ಹೇಳಿದ್ದರು.‌ ಆರೋಪ ಮಾಡಿದ್ದಾಗ ಐಟಿ, ಇಡಿ ಎಲ್ಲಿ ಹೋಗಿತ್ತು? ಎಂದು ಪ್ರಶ್ನಿಸಿದರು.