ಚಂದನವನದ `ಯುವರತ್ನ’ ಇನ್ನಿಲ್ಲ: ಹೃದಯಾಘಾತದಿಂದ ನಟ ಪುನೀತ್ ರಾಜ್ ಕುಮಾರ್ ನಿಧನ

ಬೆಂಗಳೂರು: ಸ್ಯಾಂಡಲ್ವುಡ್ನ ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ (46)ಹೃದಯಾಘಾತದಿಂದ ಅಕಾಲಿಕವಾಗಿ ಮೃತಪಟ್ಟಿದ್ದು, ಕನ್ನಡ ಚಿತ್ರರಂಗಕ್ಕೆ ಬರ ಸಿಡಿಲು ಬಡಿದಂತಾಗಿದೆ.ಇಂದು ಬೆಳಗ್ಗೆ ಜಿಮ್ನಲ್ಲಿ ಕಸರತ್ತು ನಡೆಸುತ್ತಿದ್ದಾಗ ಅಸ್ವಸ್ಥರಾದ ಪುನೀತ್ರಾಜ್ಕುಮಾರ್ ಅವರನ್ನು ತಕ್ಷಣವೇ ರಮಣಶ್ರೀ ಕ್ಲೀನಿಕ್ಗೆ ಸೇರಿಸಲಾಯಿತು. ಅವರಿಗೆ ಅಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ ನಂತರ ಹೆಚ್ಚಿನ ಚಿಕಿತ್ಸೆಗಾಗಿ ವಿಕ್ರಂ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ ತುರ್ತು ಚಿಕಿತ್ಸೆ ನೀಡಿದ ಹೊರತಾಗಿಯೂ ಫಲಿಸದೆ, ಹೃದಯಾಘಾತದಿಂದ ಪುನೀತ್ರಾಜ್ಕುಮಾರ್ ಮೃತಪಟ್ಟಿದ್ದಾರೆ ಎಂದು ಘೋಷಿಸಲಾಗಿದೆ.
1975ರ ಮಾರ್ಚ್ 17ರಂದು ಕನ್ನಡದ ಮೇರುನಟ ಡಾ.ರಾಜ್ಕುಮಾರ್ ಮತ್ತು ಪಾರ್ವತಮ್ಮ ಅವರ ಐದನೇ ಮಗನಾಗಿ ಜನಿಸಿದ್ದರು. ಸಹೋದರರಾದ ಹ್ಯಾಟ್ರಿಕ್ಹಿರೋ ಶಿವರಾಜ್ಕುಮಾರ್, ರಾಘವೇಂದ್ರ ರಾಜ್ಕುಮಾರ್, ಸಹೋದರಿಯರಾದ ಪೂರ್ಣಿಮಾ, ಲಕ್ಷ್ಮಿ, ಪತ್ನಿ ಅಶ್ವಿನಿ, ಇಬ್ಬರು ಪುತ್ರಿಯರಾದ ಧೃತಿ, ವಂದಿತ ಹಾಗೂ ಅಪಾರ ಪ್ರಮಾಣದ ಬಂಧುಬಳಗ, ಅಭಿಮಾನಿಗಳನ್ನು ಅಗಲಿದ್ದಾರೆ.1980ರಲ್ಲಿ ತಮ್ಮ ತಂದೆ ರಾಜ್ಕುಮಾರ್ ಅಭಿನಯದ ವಸಂತ ಗೀತ ಚಲನಚಿತ್ರದಲ್ಲಿ ಬಾಲ ನಟನಾಗಿ ಚಿತ್ರರಂಗಕ್ಕೆ ಕಾಲಿಟ್ಟ ಪುನೀತ್ರಾಜ್ಕುಮಾರ್, ಭಾಗ್ಯವಂತ, ಚಲಿಸುವ ಮೊಡಗಳು, ಎರಡು ನಕ್ಷತ್ರಗಳು, ಭಕ್ತಪ್ರಹಲ್ಲಾದ, ಶಿವಮೆಚ್ಚಿದ ಕಣ್ಣಪ್ಪ, ಪರಶುರಾಮ್, ಯಾರಿವನು, ಬೆಟ್ಟದ ಹೂವು ಸೇರಿದಂತೆ ಅನೇಕ ಚಿತ್ರಗಳಲ್ಲಿ ಮನೊಜ್ಞ ಅಭಿನಯ ನೀಡಿದ್ದರು.
ಬೆಟ್ಟದ ಹೂವು ಚಿತ್ರದ ರಾಮು ಪಾತ್ರಕ್ಕಾಗಿ ಚಿಕ್ಕ ವಯಸ್ಸಿನಲ್ಲೇ ರಾಷ್ಟ್ರ ಪ್ರಶಸ್ತಿ ಪಡೆದುಕೊಂಡಿದ್ದರು. ಚಲಿಸುವ ಮೋಡಗಳು, ಎರಡು ನಕ್ಷತ್ರಗಳು, ಮಿಲನ, ಜಾಕಿ ಚಿತ್ರಗಳಿಗೆ ಪುನೀತ್ ರಾಜ್ಕುಮಾರ್ ರಾಜ್ಯ ಸರ್ಕಾರದ ಶ್ರೇಷ್ಠ ನಟ ಪ್ರಶಸ್ತಿ ಪಡೆದಿದ್ದರು. ಅಪ್ಪು ಚಿತ್ರದ ಮೂಲಕ ಪೂರ್ಣ ಪ್ರಮಾಣದ ನಾಯಕ ನಟರಾಗಿ ವೃತ್ತಿ ಜೀವನ ಆರಂಭಿಸಿದ್ದರು.
ಅಭಿ, ಆಕಾಶ್, ಅರಸು, ಮಿಲನ, ಜಾಕಿ, ಹುಡುಗರು, ಅಣ್ಣಾಬಾಂಡ್, ಪವರ್, ದೊಡ್ಡಮನೆಹುಡುಗ, ರಣವಿಕ್ರಮ, ಯಾರೇ ಕೂಗಾಡಲಿ, ಬಿಂದಾಸ್, ಮೌರ್ಯ, ಆಕಾಶ್, ನಮ್ಮ ಬಸವ, ಅಜಯ್, ರಾಮ್, ಪರಮಾತ್ಮ, ರಾಜಕುಮಾರ, ನಟ ಸಾರ್ವಭೌಮ, ವಂಶಿ, ಪೃಥ್ವಿ, ವೀರಕನ್ನಡಿಗ, ನಿನ್ನಿಂದಲೇ, ಚಕ್ರವ್ಯೂಹ, ಅಂಜನಿಪುತ್ರ, ರಾಜ್ ದಿ ಶೋಮ್ಯಾನ್ ಸೇರಿದಂತೆ ಅನೇಕ ಯಶಸ್ವಿ ಚಿತ್ರಗಳನ್ನು ಕೊಟ್ಟಿದ್ದರು.
ಚಿತ್ರರಂಗವಲ್ಲದೆ ಸಾಮಾಜಿ ಕಳಕಳಿ ಹೊಂದಿದ್ದ ಪುನೀತ್ ರಾಜ್ ಕುಮಾರ್, ರಾಜ್ಯ ಸರ್ಕಾದದ ಕೆಎಂಎಫ್, ವಿದ್ಯುತ್ ಇಲಾಖೆ, ಬಿಎಂಟಿಸಿ ಸಂಸ್ಥೆಗಳಿಗೆ ರಾಯಭಾರಿಯಾಗಿದ್ದರು. ಇತ್ತೀಚೆಗಷ್ಟೇ ಕೌಶಲ್ಯಾಭಿವೃದ್ಧಿ ಇಲಾಖೆಯಿಂದ ನಿರ್ಮಿಸಲಾದ ಜಾಹಿರಾತಿನಲ್ಲೂ ರಾಯಭಾರಿಯಾಗಿ ನಟಿಸಿದ್ದರು.ಕನ್ನಡ ಕಿರುತೆರೆಯ ಇತಿಹಾಸದಲ್ಲೇ ಮೈಲಿಗಲ್ಲು ಸಾಸಿದ ಕನ್ನಡದ ಕೋಟ್ಯಾಪತಿಯ ನಾಲ್ಕು ಸರಣಿ ಕಾರ್ಯಕ್ರಮದ ನಿರೂಪಕರಾಗಿ ಪುನೀತ್ರಾಜ್ಕುಮಾರ್ ಯಶಸ್ವಿಯಾಗಿದ್ದರು. ಫ್ಯಾಮಿಲಿ ಪವರ್ ಎಂಬ ಮತ್ತೊಂದು ರಿಯಾಲಿಟಿ ಶೋನಲ್ಲೂ ನಿರೂಪಕರಾಗಿದ್ದರು. ಸಮಾಜ ಸೇವೆಯಲ್ಲೂ ಗುರುತಿಸಿಕೊಂಡಿದ್ದ ಪುನೀತ್, ಅಶ್ರಮಗಳಿಗೆ ಸಹಾಯ ಮಾಡುತ್ತಿದ್ದರು. ಪಾರ್ವತಮ್ಮ ರಾಜ್ಕುಮಾರ್ ಅವರು ಮೈಸೂರಿನಲ್ಲಿ ಸ್ಥಾಪಿಸಿ ನಡೆಸುತ್ತಿದ್ದ ಶಕ್ತಿಧಾಮ ಆಶ್ರಮಕ್ಕೆ ಪುನೀತ್ರಾಜ್ಕುಮಾರ್ ಬೆಂಬಲವಾಗಿ ನಿಂತಿದ್ದರು.